ಹೊಸ ವರ್ಷದ ಹಾರೈಕೆ
ಭಾರತೀಯ ಸಂಸ್ಕೃತಿ ಎಂದರೆ ನಾನಾ ನದಿಗಳು ಸೇರಿದ ಸಾಗರವಿದ್ದಂತೆ. ಅನೇಕ ಬಗೆಯ ಧಾರ್ಮಿಕ ನಂಬಿಕೆಗಳು, ಸಾಹಿತ್ಯ, ಸಂಸ್ಕೃತಿ, ಭಾಷೆಗಳಿಂದ ಪಕ್ವವಾದ ಸಂಸ್ಕೃತಿ ನಮ್ಮದು.ಪರಸ್ಪರ ಸಾಮರಸ್ಯದಿಂದ ಸಮನ್ವಯಗೊಂಡು ಅನೇಕ ಮುತ್ತು-ರತ್ನ ಗಳನ್ನು ಈ ಸಾಗರ ಕೊಟ್ಟಿದೆ. ಇದೇ ನಮ್ಮ ಶಕ್ತಿ ಮತ್ತು ಸತ್ವ. ನಮ್ಮ ಬಹುತ್ವದಲ್ಲಿರುವ ಸೌಹಾರ್ದತೆಯಿಂದ ಜಗತ್ತೇ ಬೆರಗಾಗಿದೆ. ಎಲ್ಲಾ ಜಾತಿ, ಮತ, ಪಂಥಗಳನ್ನೂ ಮೀರಿದ ಸಂತರಿಂದ, ಅನುಭಾವಿಗಳಿಂದ ನಮ್ಮ ಆಧ್ಯಾತ್ಮಿಕ ಜಗತ್ತು ಅದೇ ರೀತಿ ಸಾಹಿತ್ಯ, ಸಂಗೀತ, ಕಲಾ ಪ್ರಪಂಚವೂ ಸಂಪದ್ಭರಿತವಾಗಿದೆ. ಇದರಲ್ಲಿ ಒಂದೇ ತರಹದ ಜಾತಿ, ಮತಗಳ ಸಂಕುಚಿತ ಭಾವನೆಯ ಬೀಜ ಬಿತ್ತುವದು ನಮ್ಮ ಪರಂಪರೆಗೇ ದ್ರೋಹ ಎಂದು ಭಾವಿಸಬಹುದು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಡೀ ಭಾರತದ ಜನತೆ ಬ್ರಿಟಿಶ್ ಸಾಮ್ರಾಜ್ಯದ ವಿರುದ್ಧ ಹೋರಾಡಿದರು. ಅವರ ತ್ಯಾಗ, ಬಲಿದಾನಗಳ ಮೂಲಕ ನಾವು ಸ್ವಾತಂತ್ರ್ಯ ಪಡೆದೆವು. “ಒಡೆದು ಆಳು” ಎಂಬ ಬ್ರಿಟಿಶ್ ಉದ್ದೇಶವನ್ನು ನಾವು ಹೊಡೆದು ಹಾಕಿದೆವು. ಅಂಥ ಒಗ್ಗಟ್ಟನ್ನು ಈಗ ಮತ್ತೆ ಮುರಿಯುವ ಶಕ್ತಿಗಳಿಂದ ನಮ್ಮ ಸ್ವಾತಂತ್ರ್ಯ, ಸಾರ್ವಭೌಮತ್ವ, ಪ್ರಜಾಪ್ರಭುತ್ವ ಅಪಾಯಕ್ಕೀಡಾಗುವ ಸಂದರ್ಭ ಬಂದಿದೆ. ಇದು ನಮ್ಮ ಎಲ್ಲಾ ಹುತಾತ್ಮರಿಗೆ, ಸ್ವಾತಂತ್ರ್ಯವೀರರಿಗೆ ದ್ರೋಹ ಬಗೆದಂತೆ.
ಈ ಶತಮಾನದಲ್ಲಿ ನಮ್ಮ ಸಮಾಜಕ್ಕೆ ಬಡತನದ, ನಿರುದ್ಯೋಗದ, ಅನಾರೋಗ್ಯದ, ಅನ್ಯಾಯದ, ವಿಷಮತೆಯ ಸವಾಲುಗಳನ್ನು ಎದುರಿಸಲು, ನಮ್ಮ ದೇಶಕ್ಕೆ ಸಮೃದ್ಧಿಯನ್ನು ತರಲು ಸಾಮಾಜಿಕ ಸೌಹಾರ್ದತೆ ಅತ್ಯವಶ್ಯ.
ಈ ಸಂದರ್ಭದಲ್ಲಿ ಪೌರತ್ವ ಇತ್ಯಾದಿ ನೆಪಗಳಿಂದ ಸಮಾಜದಲ್ಲಿ ಅಶಾಂತಿ, ಎಲ್ಲ ಕೋಮುಗಳಲ್ಲಿ ಬಿಕ್ಕಟ್ಟು, ಕ್ಷೋಭೆ, ಭವಿಷ್ಯದ ಬಗ್ಗೆ ಚಿಂತೆ ಇತ್ಯಾದಿಗಳನ್ನು ಉತ್ಪಾದಿಸುವ ಎಲ್ಲಾ ಹೊಸ ಕಾರ್ಯ ಕಲಾಪಗಳು, ಕಾನೂನುಗಳು, ಶಕ್ತಿಗಳನ್ನು ಸಮಾಜವಿರೋಧಿ, ಪ್ರಗತಿ ವಿರೋಧಿ, ಜನ ವಿರೋಧಿಯೆಂದೇ ಭಾವಿಸಬಹುದು.
ಸದ್ಯ ದೇಶದಲ್ಲಿ ಅಶಾಂತತೆ, ಹಾಹಾಕಾರ ಉಂಟುಮಾಡಿದ ಪೌರತ್ವ ಸಂಬಂಧಿತ ಎಲ್ಲಾ ಕಾನೂನು, ಕಾರ್ಯಕ್ರಮಗಳನ್ನು ಕೈ ಬಿಟ್ಟು, ಎಲ್ಲರ ವಿಶ್ವಾಸಗಳಿಸಿ ಸರಕಾರ, ರಾಜಕೀಯ ಧುರೀಣರು ಸಾಮಾಜಿಕ ಸಾಮರಸ್ಯವನ್ನು ಸ್ಥಾಪಿಸಲು ಪರಿಶ್ರಮಿಸಬೇಕು.
ಸರಕಾರಿ ಯಂತ್ರದಿಂದ ಆದ ದೌರ್ಜನ್ಯಗಳ ಬಗ್ಗೆ ಸಾರ್ವಜನಿಕರ ದೂರುಗಳನ್ನು ವಿಚಾರಣೆಗೆ ಒಳಪಡಿಸಬೇಕು.
ಈ ಶತಮಾನದ ಹೊಸ ವರುಷ ಮತ್ತು ಹೊಸ ದಶಕದಲ್ಲಿ ಕಾಲಿಡುತ್ತಿರುವ ಸಂದರ್ಭದಲ್ಲಿ ಭಾರತ ಸೌಹಾರ್ದತೆ, ಪ್ರಜಾ ಪ್ರಭುತ್ವ, ಸಮ್ಮಜಿಕ ಐಕ್ಯದಿಂದ ಇನ್ನಷ್ಟು ಪ್ರಗತಿ ಹೊಂದಲಿ, ಬಲಗೊಳ್ಳಲಿ, ಬಲವಾದ ರಾಷ್ಟ್ರವಾಗಲಿ ಎಂದು ನಾನು ಹಾರೈಸುತ್ತೇನೆ.
ಚೆನ್ನವೀರ ಕಣವಿ
ಜನವರಿ ೧, ೨೦೨೦
ಧಾರವಾಡ